ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
`ಬೊಳ್ಳಿಂಬಳ ಪ್ರಶಸ್ತಿ` ಪುರಸ್ಕೃತ ಭಾಗವತ ಕೊರಗಪ್ಪ ನಾಯ್ಕ

ಲೇಖಕರು :
ನಾ.ಕಾರ೦ತ, ಪೆರಾಜೆ
ಶುಕ್ರವಾರ, ನವ೦ಬರ್ 23 , 2012

ಚಿಕ್ಕ ಹಳ್ಳಿ ಮನೆ. ಜಗಲಿನಲ್ಲಿ ಭಾಗವತ ಕೊರಗಪ್ಪ ನಾಯ್ಕರು ಕುಳಿತು ಯೋಚಿಸಿದಂತೆ ಭಾಸವಾಗುತ್ತದೆ. ನೆನಪಿನ ಗೆರೆಗಳು ಮಸುಕಾಗಿವೆ. ಅಪರೂಪಕ್ಕೆ ಗೆರೆಯು ಮಿಂಚಿ ಮರೆಯಾದಾಗ ವಿಷಣ್ಣ ಮುಖ ಅರಳುತ್ತದೆ. ನೆನಪುಗಳು ರಾಚಿ ಬರುತ್ತವೆ. ಅದನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಚಡಪಡಿಸುತ್ತಾರೆ. ನಿಮಿಷದ ಬಳಿಕ ಮತ್ತದೇ ಪೂರ್ವಸ್ಥಿತಿ.

ಒಂದು ಕಾಲಘಟ್ಟದ ರಂಗ ಬದುಕಿನಲ್ಲಿ ರಾತ್ರಿಯಿಡೀ ಭಾಗವತಿಕೆ ಮಾಡಿದ ನಾಯ್ಕರು ಮಾತನಾಡಲು ಅಶಕ್ತರು. ಹತ್ತು ವರುಷಗಳಿಂದ ಬಾಧಿಸಿದ ಅಸೌಖ್ಯತೆ. ನಿತ್ಯ ಆಸ್ಪತ್ರೆ ಅಲೆದಾಟ. ಗುಣವಾಗುವ ನಿರೀಕ್ಷೆಯಲ್ಲಿ ವೈದ್ಯರುಗಳ ಭೇಟಿ. ಶುಶ್ರೂಷೆ. ಈಗ ಅತ್ತಿತ್ತ ನಡೆಯುವಷ್ಟು, ಗ್ರಹಿಸುವಷ್ಟು ಶಕ್ತ. ನೆನಪು ಮಾತ್ರ ದೂರ, ಬಹುದೂರ.

ಅವರ ಸಮಕಾಲೀನ ಕಲಾವಿದರನ್ನು ನೆನಪಿಸಿಕೊಟ್ಟರೆ, ಕಳೆದ ದಿನಗಳು ಒಂದು ಕ್ಷಣ ನೆನಪಿನಂಗಳದಲ್ಲಿ ಕುಣಿಯುತ್ತವೆ. ಪ್ರಸಂಗವನ್ನು, ಪದ್ಯವನ್ನು ಜ್ಞಾಪಿಸಿದರೆ ಪದ್ಯದ ಸೊಲ್ಲನ್ನು ತಕ್ಷಣ ಹೇಳಿಬಿಡುತ್ತಾರೆ. ಸುತ್ತೆಲ್ಲಾ ಜರಗುತ್ತಿದ್ದ ತಾಳಮದ್ದಳೆಗಳ ಸ್ವಾರಸ್ಯ ಹೇಳಿದರೆ ಸ್ಪಂದಿಸುತ್ತಾರೆ. ಎಲ್ಲವೂ ನಿಮಿಷಾರ್ಧ. ಅಸ್ಪಷ್ಟ.

ನಿವೃತ್ತ ಅಧ್ಯಾಪಕ, ಅರ್ಥಧಾರಿ ಬಿ.ಎಸ್.ಓಕುಣ್ಣಾಯರು ನಾಯ್ಕರ ಒಡನಾಡಿ. ಪಾಣಾಜೆ ಸುತ್ತಮುತ್ತ ನಡೆಯುತ್ತಿದ್ದ ಬಹುತೇಕ ತಾಳಮದ್ದಳೆಗಳಲ್ಲಿ ಕೊರಗಪ್ಪ ನಾಯ್ಕರದ್ದೇ ಭಾಗವತಿಕೆ. ಇವರಿಗೆ ನಿಕಟ ಸಂಪರ್ಕ. ಈಚೆಗೆ ಓಕುಣ್ಣಾಯರ ಜತೆ ಅವರ ಮನೆಗೆ ಭೇಟಿ ನೀಡಿದಾಗ ಇವರನ್ನು ಗುರುತಿಸುವಲ್ಲಿ ನಾಯ್ಕರು ಕಷ್ಟಪಟ್ಟಿದ್ದರು. ಗೊತ್ತಾದ ಬಳಿಕ ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದಿದ್ದರು.

ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸನಿಹದ ಖಂಡೇರಿಯು ಕೊರಗಪ್ಪ ನಾಯ್ಕರ ಹುಟ್ಟೂರು. ಪ್ರಸ್ತುತ ಸನಿಹದ ಅರೆಕ್ಕಾಡಿಯಲ್ಲಿ ಹಲವು ಸಮಯದಿಂದ ವಾಸ. ಈಗವರಿಗೆ ಅರುವತ್ತೆಂಟು ವರುಷ ಪ್ರಾಯ.

ತಂದೆ ಐತು ನಾಯ್ಕ. ತಾಯಿ ಅಮ್ಮು. ಮೂರರ ತನಕ ವಿದ್ಯಾಭ್ಯಾಸ. ಬಾಲ್ಯದಿಂದಲೇ ಯಕ್ಷಗಾನದತ್ತ ಒಲವು. ಅದರಲ್ಲೂ ಭಾಗವತನಾಗಬೇಕೆಂಬ ಹಂಬಲ. ಕೇಳಿ ಕಲಿತುದೇ ಹೆಚ್ಚು. ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಪಾಠ. ಬಣ್ಣದ ಕುಂಞಿರಾಮರಿಂದ ನಾಟ್ಯಾಭ್ಯಾಸ. ಲಕ್ಷ್ಮಣ ಆಚಾರ್ಯರಿಂದ ಮದ್ದಳೆಯ ಕಲಿಕೆ. ಮುಂದೆ ನಿಡ್ಲೆ ನರಸಿಂಹ ಭಟ್ಟರು ಚೆಂಡೆಗೆ ಗುರುವಾದರು.

ಯಕ್ಷ ಪ್ರಚಂಡರ ಜತೆಗಿದ್ದ ಅನುಭವವು ಕೊರಗಪ್ಪ ನಾಯ್ಕರ ಮೇಳ ಜೀವನದ ಸುಭಗತನಕ್ಕೆ ಹೊಸ ದಿಕ್ಕು ತೋರಿತು. ಮೂವತ್ತೇಳು ವರುಷ ಶ್ರೀ ಕಟೀಲು ಮೇಳವೊಂದರಲ್ಲೇ ತಿರುಗಾಟ. ಸಂಗೀತಗಾರನಾಗಿ ಪಡಿಮಂಚವೇರಿದ ಭಾಗವತ ಮುಂದೆ ಇಡೀ ರಾತ್ರಿ ಆಟವನ್ನು ಆಡಿಸುವ ತನಕ ನಿಷ್ಣಾತರಾದರು.

ಕಟೀಲು ಮೇಳ ಸೇರುವ ಪೂರ್ವದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಒಂದು ವರುಷ, ಕುಂಡಾವಿನಲ್ಲಿ ಒಂದು ವರುಷ ಮತ್ತು ಪುತ್ತೂರು ಮೇಳಗಳಲ್ಲಿ ವ್ಯವಸಾಯ. ಮಳೆಗಾಲದಲ್ಲಿ ಸ್ಥಳೀಯವಾಗಿ ತಾಳಮದ್ದಳೆಗಳಲ್ಲಿ ಭಾಗಿ.

ತಾಳಮದ್ದಳೆಯ ಬಿರುಬಿನ ಕಾಲ. ಮನೆಗಳಲ್ಲಿ ಶುಭ ಸಮಾರಂಭಗಳು ನಡೆದಾಗ ಅಲ್ಲೆಲ್ಲಾ ತಾಳಮದ್ದಳೆಗೆ ಮೊದಲ ಮಣೆ. ಉದ್ಧಾಮರ ಕೂಟಗಳು. ಆ ದಿನಗಳಲ್ಲಿ ನಾಯ್ಕರಿಗೆ ಬಿಡುವಿರದ ದುಡಿಮೆ. ಸಮಯ ಸಿಕ್ಕಾಗ ಆಸಕ್ತರಿಗೆ ಭಾಗವತಿಕೆ ಕಲಿಸಿಕೊಟ್ಟುದೂ ಇದೆ.

ಕರ್ನಾಟಕ ಮೇಳದಲ್ಲಿ ತುಳು ಪ್ರಸಂಗಗಳನ್ನು ಆಡುವ ಸಂದರ್ಭದಲ್ಲಿ ಇವರನ್ನು ವಿಶೇಷವಾಗಿ ಭಾಗವತಿಕೆಗೆ ಮೇಳದ ಯಜಮಾನರು ಆಹ್ವಾನಿಸುತ್ತಿದ್ದರು. ತುಳು ಭಾಷೆಯ ಕುರಿತು ಇವರಿಗಿದ್ದ ಅನುಭವವೇ ಇದಕ್ಕೆ ಕಾರಣ,' ಎಂದು ಗಂಡನಿಗೆ ಸಾಥ್ ಆಗುತ್ತಾರೆ ಮಡದಿ ಲಕ್ಷ್ಮೀ.

ಅವರು ಇನ್ನು ಹಾಡುವುದಿಲ್ಲ! ಅವರು ಹಾಡಿದ ಒಂದು ಕ್ಯಾಸೆಟ್ ಎಲ್ಲಾದರೂ ಸಿಕ್ಕರೆ ಅದು ದಾಖಲೆಯಾಗುತ್ತಿತ್ತು, ಎನ್ನುವ ಆಶಯ ಲಕ್ಷ್ಮೀಯವರಿಗಿದೆ. ಗಂಡನ ಆಸಕ್ತಿಯನ್ನು ಗೌರವದಿಂದ ಕಾಣುವ, ಹೆಮ್ಮೆ ಪಟ್ಟುಕೊಳ್ಳುವ ಲಕ್ಷ್ಮೀಯವರ ಆಸೆ ಹುಸಿಯಾಗದು.

ಪ್ರಸ್ತುತ ಲಕ್ಷ್ಮೀ ಗಂಡನಿಗೆ ಆಸರೆ. ನಾಯ್ಕರಿಗೆ ದನಿ. ಅಸ್ಪಷ್ಟ ಮಾತುಗಳಿಗೆ ಸ್ಪಷ್ಟತೆಯ ಸ್ಪರ್ಶ ನೀಡುವ ಮಾರ್ಗದರ್ಶಕಿ. ಸರಕಾರದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಲ್ಪಕಾಲ ಕೆಲಸ. ಮಗ ದೇವಿಪ್ರಸಾದ್ ಸ್ವ-ಉದ್ಯೋಗದ ದುಡಿಮೆ. ನಾಯ್ಕರ ಅಸೌಖ್ಯತೆಗೆ ಇವರೆಲ್ಲರ ದುಡಿಮೆಯಲ್ಲಿ ಏನಿಲ್ಲವೆಂದರೂ ತಿಂಗಳಿಗೆ ಒಂದು ಸಾವಿರ ರೂಪಾಯಿ ಔಷಧಿಗೆ ಮೀಸಲಿಡುವಂತಹ ಸ್ಥಿತಿ.

ಮಾಸಾಶನಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎರಡು ವರುಷಗಳು ಸಂದುಹೋದುವು. ಇಂತಹ ಅಶಕ್ತ ಸ್ತಿತಿಯಲ್ಲಿ ಕಲಾವಿದನಿದ್ದಾಗ ಸಿಗುವ ಕಿಂಚಿತ್ ಮೊತ್ತವು ಕೊನೇ ಪಕ್ಷ ಔಷಧಿವೆಚ್ಚವನ್ನಾದರೂ ಸರಿದೂಗಿಸಿತಲ್ವಾ. ಕಾಟುಕುಕ್ಕೆ ಕೊರಗಪ್ಪ ನಾಯ್ಕರ ಸೇವಾತತ್ಪರತೆಗೆ ಲಭ್ಯವಾದ ಪ್ರಶಸ್ತಿಗಳು ಹಲವು. ಕುಂಬಳೆಯ ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನ, ಬೊಂಡಾಳ ಪ್ರಶಸ್ತಿ, ಅಳಿಕೆ ರಾಮಯ್ಯ ರೈ ಸ್ಮಾರಕ ಪ್ರಶಸ್ತಿಗಳ ಜತೆಗೆ; ವಿವಿಧ ಸಂಮಾನ, ಪುರಸ್ಕಾರಗಳು ಪ್ರಾಪ್ತವಾಗಿವೆ. (ಅಶಕ್ತರಿಗೆ ಶಕ್ತಿ ಕೊಡಲು ಮಿಡಿಯುವ ಮನಸ್ಸುಗಳಿಗಾಗಿ ಕೊರಗಪ್ಪರ ಚಿರಂಜೀವಿ ದೇವಿಪ್ರಸಾದರ ಸಂಪರ್ಕ ಸಂಖ್ಯೆ 09496560392)

ಪಾಣಾಜೆಯ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ನೀಡುವ ಈ ಬಾರಿಯ 'ಬೊಳ್ಳಿಂಬಳ ಪ್ರಶಸ್ತಿ'ಗೆ ಕಾಟುಕುಕ್ಕೆ ಕೊರಗಪ್ಪ ನಾಯ್ಕರಿಗೆ ಪ್ರಾಪ್ತಿ. ನವೆಂಬರ್ 25ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಜರುಗಿದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಶಿಕೋತ್ಸವದ ಸಂದರ್ಭದಲ್ಲಿ ನಾಯ್ಕರಿಗೆ ಪ್ರಶಸ್ತಿ ಪ್ರದಾನ.

ಕೃಪೆ : http://yakshamatu.blogspot.in/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ